Showing posts with label Kannada. Show all posts
Showing posts with label Kannada. Show all posts

Tuesday, June 23, 2009

ಬೆಟ್ಟದ ಜೀವ

ಶಿವರಾಮ ಕಾರಂತರ ಬೆಟ್ಟದ ಜೀವ ಓದುವ ಅವಕಾಶ ಕೆಲವು ದಿನಗಳ ಹಿಂದೆ ಒದಗಿತು. ಇದೇ ಮೊದಲ ಬಾರಿಗೆ ಕಾರಂತರ ಕೃತಿ ಓದಿದ್ದು. ಓದುತ್ತಿದ್ದಂತೆಯೇ ಊರಿನ ನೆನಪು ಉಮ್ಮಳಿಸಿ ಬಂತು. ಎಷ್ಟು ಚೆನ್ನಾಗಿ ಸುಳ್ಯ, ಪಂಜ ಸೀಮೆಯ ಬಗ್ಗೆ ವರ್ಣಿಸಿ ಬರೆದಿದ್ದಾರೆಂದರೆ ಮರಳಿ ಮಣ್ಣಿಗೆ ಹೋಗಿಬಿಡುವ ಆಸೆಯಾಯಿತು. ಮಧ್ಯೆ ವಿಟ್ಲ, ಪುತ್ತೂರು ಸೀಮೆಯ ಬಗ್ಗೆಯೂ ಉಲ್ಲೇಖಿಸಿದ್ದು ಓದಿ ಸಂತೋಷವಾಯಿತು. ಗುತ್ತಿಗಾರು ಬೆಳ್ಳಾರೆಯ ನಡುವೆ ಹಾದಿ ತಪ್ಪಿ ಗೋಪಾಲ ಭಟ್ಟರ ಮನೆ ತಲುಪುವ ಲೇಖಕ ಶಿವರಾಮ, ಭಟ್ಟರು ಹಾಗೂ ಮಡದಿ ಶಂಕರಿಯ ಆತಿಥ್ಯಕ್ಕೆ ಮನಸೋತು ಅವರ ಪ್ರೀತಿಯ ಕೋರಿಕೆಯ ಮೇಲೆ ಕೆಲವು ದಿನಗಳನ್ನು ಅಲ್ಲೇ ಕಳೆಯುತ್ತಾನೆ. ಅಲ್ಲಿನ ಅವರ ದೈನಂದಿನ ಜೀವನ, ಏಕತಾನತೆ, ಕೃಷಿಕ ಜೀವನ, ಕಾಡಿನ ಮಧ್ಯದ ಬದುಕಿನ ಹಲವು ಮುಖಗಳನ್ನು ಲೇಖಕ ಕೆಲವೇ ದಿನಗಳಲ್ಲಿ ಕಾಣುತ್ತಾನೆ. ತಾಯಿ ಶಂಕರಿ ಮನೆ ಬಿಟ್ಟು ಹೋದ ಮಗನಿಗಾಗಿ ಹಾತೊರೆಯುವುದು, ಭಟ್ಟರು ದುಃಖವನ್ನು ಮರೆಯಲು ಕೆಲಸಗಳಲ್ಲಿ ತೊಡಗುವುದು, ಸಾಕು ಮಗ ನಾರಾಯಣ ಅವನ ಹೆಂಡತಿಯ ತೊಳಲಾಟ, ಆದರೂ ಕಾಡಿನಲ್ಲಿ ನಾಡು ಕಟ್ಟಿ ಅದರಲ್ಲಿ ತಮ್ಮ ಜೀವನದ ಸಾರ್ಥಕತೆ ಕಾಣುವುದು ಎಲ್ಲವೂ ಮನಸ್ಸಿನಲ್ಲಿ ಬೆಚ್ಚಗೆ ಕುಳಿತು ಬಿಟ್ಟವು.

ಕಾರಂತರ ಬರವಣಿಗೆ ಎಷ್ಟು ಸುಲಲಿತವೋ, ಅವರು ಬರೆದಿರುವುದು ಅಷ್ಟೇ ಸತ್ಯ. ನನಗೆ ಆಶ್ಚರ್ಯವನ್ನುಂಟು ಮಾಡಿದ ಸಂಗತಿ ಎಂದರೆ ಇತ್ತೀಚಿಗೆ ಚರ್ಚೆಗೆ ಬಂದಂತಹ ವಿಷಯಗಳನ್ನೆಲ್ಲ ಆಗಿನ ಕಾಲದಲ್ಲೇ ಅವರು ಬರೆದಿದ್ದುದು. ಪೂರ್ವಿಕರ ಕಾಲದಿಂದ ಬಂದಂತಹ ಆಸ್ತಿಯಲ್ಲಿ ಅಡಿಕೆ, ತೆಂಗು, ಬಾಳೆ, ಭತ್ತ ಬೆಳೆಯುವುದು ನಮ್ಮಲ್ಲಿ ಈವರೆಗೂ ನಡೆದುಕೊಂಡು ಬಂದಿದೆ. ಆದರೆ ಮಕ್ಕಳು ವಿದ್ಯಾವಂತರಾಗುತ್ತಿದ್ದಂತೆ ಊರು ಬಿಟ್ಟು ಪಟ್ಟಣಕ್ಕೆ ವಲಸೆ ಹೋಗುವುದು, ಕೆಲಸಕ್ಕೆ ಆಳುಗಳು ಸಿಗದಿರುವುದು, ಬಂದ ಘಟ್ಟದ ಮೇಲಿನ ಜನ ಮಧ್ಯದಲ್ಲಿ ಬಿಟ್ಟು ಹೋಗುವುದು, ಇವೆಲ್ಲ ದೇಶದ ಬೆನ್ನೆಲುಬು ಅನಿಸಿಕೊಳ್ಳುವ ರೈತರಿಗೆ ಎಲ್ಲಿಲ್ಲದ ತೊಂದರೆಯನ್ನುಂಟು ಮಾಡಿವೆ. ಗೋಪಾಲ ಭಟ್ಟರು ಮಗನಿಗೆ ಇಂಗ್ಲೀಷ್ ಕಲಿಸಿದ್ದೆ ತಮಗೆ ಮುಳುವಾಯಿತೇ ಎಂದು ಚಿಂತಿಸಿದಾಗ ನಾನೂ ಮಾಡಿದ್ದು ಅದೇ ಅಲ್ಲವೇ ಎಂಬ ಅಪರಾಧಿ ಭಾವ ಬಂದಿದ್ದು ನಿಜ.

ಭಟ್ಟರು ಕಾಟುಮೂಲೆಯಲ್ಲಿ ಕಾಡು ಕಡಿದು ತೋಟ ಮಾಡಿದ ಸಾಹಸ, ಚಿಕ್ಕಂದಿನಲ್ಲಿ ನಾವು ಮಕ್ಕಳು ಬೇಸಿಗೆ ರಜೆಯಲ್ಲಿ ಕಾಟುಮೂಲೆಗೆ ಹೋಗಿ ಲಾಗ ಹಾಕಿ, ಮಾವಿನ ಕಾಯಿ/ಹಣ್ಣು ತಿಂದು ಊಟ ಬೇಡ ಅನ್ನುತ್ತಿದ್ದುದನ್ನು ನೆನಪಿಗೆ ತಂದಿತು. ಗುಡ್ಡ ಹತ್ತಲು ಸುಲಭ ದಾರಿ ಇದ್ದರೂ ಸಾಹಸ ಎಂಬ ಹುಂಬ ಧೈರ್ಯದಲ್ಲಿ ಎಲ್ಲೆಲ್ಲೋ ಹೋಗಿ ಜಾರಿ, ಬಿದ್ದು, ಎದ್ದು, ದಿನವೆಲ್ಲ ಕಾಡು ಸುತ್ತಿದ ನೆನಪು ಇನ್ನೂ ಹಸಿಯಾಗಿ ಉಳಿದಿದೆ. ದೇರಣ್ಣ ಗೌಡನು 'ಮಂಗಗಳ ಕಾಟ ಅತಿಯಾಗಿದೆ, ಈ ಬ್ರಾಹ್ಮಣರು ಮಂಗಗಳನ್ನು ಹೊಡೆಯಲೂ ಹಿಂದೆ ಮುಂದೆ ನೋಡುತ್ತಾರೆ' ಎಂದಿದ್ದು, ನನ್ನ ಅಜ್ಜ ಮನೆಯಲ್ಲಿದ್ದ ಕೋವಿಗೆ ಗುಂಡು ಹಾಕಿ ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದದು ನೆನಪಾಯಿತು. ಭೂತದ ಕೋಲ ಮಾಡಿಸಬೇಕು ಅಯ್ಯ ಎಂದು ಬಟ್ಯ, ಅದಕ್ಕೆ ಖರ್ಚಿಗೆ ಹಣ ಎಲ್ಲಿಂದ ತರಲಿ ಎನ್ನುವ ದೇರಣ್ಣ ಗೌಡ, ನೀವು ಹಣ್ಣು ಕಾಯಿ ಕೊಡಿ ಎಂದು ಭಟ್ಟರು ಎಂದಿದಕ್ಕೆ, ಬಟ್ಯನ 'ನೀವು ಜಪ ತಪ ಮಾಡಿ ವಿಭೂತಿ ಹಚ್ಚುತ್ತೀರಿ, ನಾನು ಕೋಳಿಯ ಬದಲು ತೆಂಗಿನ ಕಾಯಿ ಕೊಟ್ಟರೆ ಕಲ್ಕುಡ ನನ್ನ ರುಂಡವನ್ನೇ ಹಾರಿಸೀತು' ಎಂಬ ಉತ್ತರ ತಮಾಷೆ ಎನಿಸಿತು.

ತೋಟ,ಗದ್ದೆ, ಗುಡ್ಡ, ಅದರ ಪಕ್ಕದಲ್ಲೇ ಹರಿಯುವ ನದಿ, ನದಿಯ ನಂತರ ಕಳನ್ಜಿಮಲೆ ಕಾಡು. ಕಾರಂತರು ಮಾವೆಗೆ ಬಂದಿದ್ದರೂ ಇದೇ ರೀತಿ ಬರೆಯುತ್ತಿದ್ದಾರೋ ಏನೋ... ಅಥವಾ ನಮ್ಮ ಸುಳ್ಯ, ಪುತ್ತೂರು,ವಿಟ್ಲ ಸೀಮೆಯಲ್ಲಿ ಇಂಥ ಎಷ್ಟು ಗೋಪಾಲ ಭಟ್ಟರೂ, ಅವರ ಕಥೆಗಳೂ ಕಳೆದು ಹೋಗಿವೆಯೋ ಏನೋ... ಗೋಪಾಲ ಭಟ್ಟರು ಶ್ರಮ ಜೀವಿಯಾಗಿ, ಹಟ ಕಟ್ಟಿ ಸಾಹಸಗಳನ್ನು ಮಾಡುತ್ತಾ, ಮಗನ ಬಗ್ಗೆ ನೊಂದಿದ್ದರೂ ತಾತ್ವಿಕರಂತೆ ಮಾತಾಡಿ ತನಗೆ ತಾನೇ ಸಾಂತ್ವನ ಹೇಳುವ ಪರಿ, ನಾರಾಯಣನ ಜೀವನಕ್ಕೆ ದಾರಿ ಮಾಡಿಕೊಟ್ಟು ಅದರಲ್ಲೇ ಸಂತೋಷ ಕಾಣುವ ತ್ಯಾಗಮಯಿ ಜೀವ, ತನ್ನ ಅರ್ಧಾಂಗಿ ಶಂಕರಿಯ ಮೇಲಿನ ಪ್ರೀತಿ, ಮಮಕಾರ - ಇವುಗಳು ಮನದಾಳಕ್ಕೆ ಇಳಿದು ಉಳಿದು ಬಿಟ್ಟವು.

Tuesday, April 14, 2009

ತೇಜಸ್ವಿ ನಾವಧೀತಮಸ್ತು..

ಭಾರತೀಯ ವ್ಯವಸ್ಥಾ ಪ್ರಬಂಧ ಸಂಸ್ಥೆ ಬೆಂಗಳೂರು ಎಂದ ಕೂಡಲೇ ಏನೋ ರೋಮಾಂಚನ, ಈಗ ನನಗೆ ಅಲ್ಲಿ ಕಲಿಯುವ ಭಾಗ್ಯ ಒದಗಿ ಬಂದಿದೆ ಎಂದಾಗ ಕನಸೋ, ನಿಜವೋ ಎಂದು ನನ್ನನ್ನು ನಾನೇ ಕೇಳಿಕೊಳ್ಳುತ್ತೇನೆ.

ಎಲ್ಲರೂ 'ತುಂಬಾ ಸಂತೋಷ, ಕೊನೆಗೂ ಸಿಕ್ಕಿತಲ್ಲ', 'ಶುಭಾಶಯಗಳು, ಒಳ್ಳೆದಾಗಲಿ', 'ಒಹೋ ಭಾರಿ ಒಳ್ಳೇ ಸುದ್ಧಿ, ಪಾರ್ಟಿ ಯಾವಾಗ' ಅಂತ ಪಾಟೀ ಸವಾಲು ಹಾಕ್ತ ಇದ್ದಾರೆ. ನನ್ನನ್ನೇ ಕೇಳ್ತಾ ಇದ್ದಾರಾ, ನನಗೆ ಬಂದ ಈಮೇಲ್ ನಿಜವಾಗ್ಲೂ ಅಲ್ಲಿಂದನೇ ಬಂದಿದ್ದ, ನನ್ನ ಕೈ ನಾನೇ ಚಿವುಟಿ ನೋಡಿದ್ದಾಯಿತು. ಹೌದು ನನ್ ಹತ್ರನೇ ಎಲ್ಲ ಕೇಳ್ತಾ ಇರೋದು..

ಮನೆಯಲ್ಲಿ ಎಲ್ಲಿಲ್ಲದ ಸಂಭ್ರಮ, ಎಲ್ಲರಿಗೂ ಫೋನ್ ಮಾಡಿ ಹೇಳಿದ್ದೂ ಆಯಿತು, ಎಸ್ ಎಂ ಎಸ್ ಮಾಡಿದ್ದೂ ಆಯಿತು.

ಎರಡು ವರ್ಷಗಳ ಶ್ರಮಕ್ಕೆ ಫಲ ಸಿಕ್ಕಿತು. ಇಲ್ಲಿಗೆ, ಒಂದು ತಪಸ್ಸಿಗೆ ಇತಿಶ್ರೀ ಹಾಡುತ್ತ ಇನ್ನೊಂದು ತಪಸ್ಸಿಗೆ ಅಣಿಯಾಗುತ್ತಿದ್ದೇನೆ..

ಏನು ಬಡಬಡಾಯಿಸುತ್ತಿದ್ದಾಳೆ ಅಂದುಕೊಳ್ತಾ ಇದ್ದೀರ, IIM Bangalore ನಲ್ಲಿ MBAಗೆ ಅಡ್ಮಿಶನ್ ಸಿಕ್ತು ಅಂತ ಇದ್ದೀನಿ...

ಜಯವಾಗಲಿ!

-ಸುಪ್ರೀತ

Wednesday, March 04, 2009

ಸ್ವಲ್ಪ ಹೀಗೆ...

ಕನ್ನಡದಲ್ಲಿ ಬರೆಯಬೇಕು ಅಂತ ಅಂದುಕೊಂಡು ವರ್ಷಗಳೇ ಕಳೆದಿವೆ, ಇನ್ನೂ ಏನು ಬರೆಯಬೇಕು ಎಂಬುದು ನಿರ್ಧಾರ ಮಾಡಿಲ್ಲ. ನಿರ್ಧಾರ ಎನ್ನೋದಕ್ಕೆ ಕನ್ನಡದಲ್ಲಿ ಏನು ಹೇಳೋದು ಅಂತ ಎರಡು ನಿಮಿಷ ಯೋಚ್ನೆ ಮಾಡಿ ನಂತರ ಸುಮಾ ಹತ್ರ ಕೇಳಿ ಬೈಸ್ಕೊಂಡೆ... 'ನಮ್ಮ ಬೆಂಗಳೂರು' ಮಹಿಮೆ ನೋಡಿ! ಬೆಂಗಳೂರಿಗಳಾದ ಮೇಲೆ ಕಂಗ್ಲೀಷ್ ಮಾತಾಡಿ ಅಭ್ಯಾಸ..

ಮೊನ್ನೆ ಹೀಗೇ ಆಯಿತು ನೋಡಿ, ನಾನು ನವೋದಯಕ್ಕೆ ಹೋಗಿದ್ನಾ, ಅಲ್ಲಿ ಪ್ರಾಂಶುಪಾಲರು ಕನ್ನಡದಲ್ಲಿ ಭಾಷಣ ಮಾಡು ಅಂತ ಅಂದುಬಿಟ್ರು. ನಂಗೆ ಒಂದು ಸೆಕೆಂಡ್ ಕಣ್ಣ ಮುಂದೆ ಕತ್ತಲು ಕಟ್ಟಿತು, ಮತ್ತೆ ಶುರು ಹಚ್ಕೊಂಡೆ, ಮಾತಾಡ್ತಾ ಮಾತಾಡ್ತಾ ಇದಕ್ಕೆ ಕನ್ನಡದಲ್ಲಿ ಏನು ಹೇಳೋದು, ಅದಕ್ಕೆ ಕನ್ನಡದಲ್ಲಿ ಏನು ಹೇಳೋದು ಅಂತ ಯೋಚ್ನೆ ಮಾಡ್ತಾ ಮಾತಾಡಿದೆ. ಪಾಪ, ಆ ಮಕ್ಕಳಿಗೆ ಎಷ್ಟು ಅರ್ಥ ಆಯಿತೋ ದೇವರಿಗೇ ಗೊತ್ತು...

ಆಮೇಲೆ ನೂರ್ಜಾಹಾನ್ ಮಿಸ್ ಅಂದ್ರು, ಕನ್ನಡದಲ್ಲಿ ಯಾಕೆ ಬರಿಯಲ್ಲ ನೀನು, ಕನ್ನಡ ಮರೆಯುತ್ತ ಇದ್ದೀಯಾ ಅನ್ಸುತ್ತೆ, ಅಂತ. ಅಯ್ಯೋ ಹೋಗಿ ಮಿಸ್, ಬರೀಬೇಕು ಅಂತ ಯೋಚ್ನೆ ಯಾವತ್ತೂ ಮಾಡ್ತೀನಿ, ಆದ್ರೆ ಟೈಪ್ ಮಾಡ್‌ಬೇಕಲ್ಲ... ಅದಕ್ಕೆ ತುಂಬಾ ಹೊತ್ತು ತಗೊಳ್ಳುತ್ತೆ. ಅಷ್ಟೆಲ್ಲ patience ನಂಗಿಲ್ಲ ಅಂತ. ಅದು ಮಾತ್ರ ಅಲ್ಲ, ದಿನ ಇಡೀ ಆಫೀಸ್ನಲ್ಲಿ ಕೂತು ಆಮೇಲೆ ಮನೆಯಲ್ಲಿ ಕಂಪ್ಯೂಟರ್ ಹತ್ರನು ಸುಳಿಯೊ ಮನಸ್ಸು ಬರಲ್ಲ. ಆಫೀಸ್ನಲ್ಲಿ ಈ ಘನಂದಾರಿ ಕೆಲ್ಸ ಮಾಡಿದ್ರೆ ಒದ್ದು ಓಡಿಸ್ತಾರೆ, 'ಸಾಕಮ್ಮ ನೀನು ಉಪಕಾರ ಮಾಡಿದ್ದು, ಮನೆಯಲ್ಲೇ ಕೂತು ಈ extra curricular activities ಮಾಡು ಅಂತ'.

ಹಾಂ, ಕಂಗ್ಲೀಷ್ ಬಗ್ಗೆ ಹೇಳ್ತಾ ಇದ್ದೆ... ಬೆಂಗ್ಳೂರಿನಲ್ಲಿ ಆಟೋದಲ್ಲಿ ಹೋಗೋವಾಗ ಮಜಾ ಇರುತ್ತೆ. ಬಲಕ್ಕೆ ತಿರುಗಿ ಅಂದ್ರೆ ರೈಟಾ ಲೆಫ್ಟಾ ಮೇಡಮ್ ಅಂತಾರೆ. ಇನ್ನೂ ಕೆಲವರು ಕನ್ನಡದಲ್ಲಿ ಮಾತಾಡಿದ ನಂತರವೂ ಕಹಾನ್ ಜಾನಾ ಹೈ ಮೇಡಮ್ ಅಂತಾರೆ. ಅದು ಹೇಗೆ ಮುಖ ನೋಡಿ ಇವ್ಳು ಕನ್ನಡ ಮಾತಾಡೋಕ್ಕೆ ಫಿಟ್ ಅಲ್ಲ ಅಂತ ನಿರ್ಧಾರ ಮಾಡ್ತಾರೊ!

ಇಲ್ಲಿ ಹಲವೆಡೆ ಬೋರ್ಡ್ ಗಳ ಅವಾಂತರ ಹೇಳತೀರದ್ದು. ಜಯನಗರದಲ್ಲಿ ಇಬ್ರಾಹಿಮ್ಸ್ 'ಇಭ್ರ್ ಹಿಮ್ಸ್' ಆದರೆ ಬ್ರಿಗೇಡ್ ರಸ್ತೆಯಲ್ಲಿ ಅತಿಥಿ 'ಅಥಿತಿ'ಯಾಗಿ ಕನ್ನಡ ಗೊತ್ತಿರೋರಿಗೆ ಒಂದೋ ಕನ್ ಫ್ಯೂಸ್ ಮಾಡುತ್ವೆ, ಇಲ್ಲ ತಲೆ ಚಚ್ಚಿಕೊಳ್ಳೋ ಹಾಗಾಗುತ್ತೆ.... ಇದು ಖಾಲಿ ಸ್ಯಾಂಪಲ್ ಅಷ್ಟೇ, ಲಿಸ್ಟ್ ಮಾಡಿದ್ರೆ ಮುಗಿಲಿಕಿಲ್ಲ(ಬೆಂಗ್ಳೂರ್ ಭಾಷೆಯಲ್ಲಿ 'ಮುಗ್ಯೋದೇ ಇಲ್ಲ')...

ಸಧ್ಯಕ್ಕೆ ಇಷ್ಟು ಸಾಕು, ಆದಷ್ಟು ಬೇಗ ಇನ್ನೊಂದು ಲೇಖನ ಬರೆಯಲು ಪ್ರಯತ್ನಿಸುತ್ತೇನೆ....

ಕನ್ನಡದಲ್ಲಿ ಟೈಪಿಸಲು ಅನುವು ಮಾಡಿಕೊಟ್ಟ http://quillpad.in/ಗೆ ಹೃದಯಪೂರ್ವಕ ಧನ್ಯವಾದಗಳು.

ಜಯವಾಗಲಿ!

-ಸುಪ್ರೀತ